ನವದೆಹಲಿ: ಭಾರತವನ್ನು ಫಾರ್ಮಾ ಕ್ಷೇತ್ರದಲ್ಲಿ ಸ್ವಾವಲಂಬಿ ಮಾಡಲು ಮುಂದಿನ 25 ವರ್ಷಗಳಿಗೆ ರೂಪುರೇಷೆ ರೂಪಿಸುವ ಅಗತ್ಯವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಒತ್ತಿ ಹೇಳಿದ್ದಾರೆ.
ನವದೆಹಲಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಮಾಂಡವೀಯ, ಭಾರತವು ಜೆನೆರಿಕ್ ಔಷಧಿಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ ಮತ್ತು ಭಾರತವನ್ನು ವಿಶ್ವದ ಔಷಧಾಲಯ ಎಂದು ಕರೆಯಲಾಗುತ್ತಿದೆ ಎಂದಿದ್ದಾರೆ.
ಭಾರತವು ವಿಶ್ವದ ಹಲವು ದೇಶಗಳಿಗೆ ಜೆನೆರಿಕ್ ಔಷಧಿಗಳನ್ನು ರಫ್ತು ಮಾಡುತ್ತಿದೆ. ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಭಾರತದಲ್ಲಿ ಫಾರ್ಮಾ ಉದ್ಯಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ನಮ್ಮ ಪಠ್ಯಕ್ರಮ ಮತ್ತು ಸಂಶೋಧನೆಯು ಕೈಗಾರಿಕೆಗಳ ಅಗತ್ಯಕ್ಕೆ ಹೊಂದಿಕೆಯಾಗಬೇಕು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನವೀನ ಪರಿಹಾರಗಳನ್ನು ಒದಗಿಸಬೇಕು ಎಂದು ಅವರು ಹೇಳಿದರು.
ದಾಖಲೆಯ ಸಮಯದಲ್ಲಿ ಕೋವಿಡ್-19 ಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದಲ್ಲಿ ಬುದ್ಧಿಶಕ್ತಿ ಮತ್ತು ಮಾನವಶಕ್ತಿಯ ಕೊರತೆಯಿಲ್ಲ ಎಂದು ತೋರಿಸಿ ಕೊಟ್ಟಿದ್ದೇವೆ ಎಂದು ಮಾಂಡವೀಯ ಹೇಳಿದ್ದಾರೆ.
ಪಿಎಂ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಲಸಿಕೆ ಸಂಶೋಧನೆಗಾಗಿ 9 ಸಾವಿರ ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ಮೂಲಕ ನಮ್ಮ ವಿಜ್ಞಾನಿಗಳು ಮತ್ತು ಸಂಶೋಧಕರ ಸಾಮಥ್ರ್ಯಗಳ ಮೇಲಿನ ನಂಬಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾಬೀತುಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13